ಮಂಗಳೂರು, ಜುಲೈ 22: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.)ಯ ಸಂಸ್ಥಾಪಕರಲ್ಲಿ ಪ್ರಮುಖರು, ರಾಜ್ಯ ಸಂಘಟನಾ ಸಂಚಾಲಕರು ಹಾಗೂ ಹಿರಿಯ ದಲಿತ ಮುಖಂಡರಾಗಿದ್ದ ಎಂ. ದೇವದಾಸ್ ಅವರು ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು. ಅವರ ನಿಧನದಿಂದ ದಲಿತ ಚಳವಳಿ ಹಾಗೂ ಸಾಮಾಜಿಕ ಹೋರಾಟದ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎಂ. ದೇವದಾಸ್ ಅವರು ಜುಲೈ 12ರಂದು ಮುಂಜಾನೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ಇಂದು ಮುಂಜಾನೆ ಸುಮಾರು 3.30 ಗಂಟೆಗೆ ರಕ್ತದೊತ್ತಡದ ಏರಿಳಿತ ಉಂಟಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೆಳವಣಿಗೆಯಲ್ಲಿ ಎಂ. ದೇವದಾಸ್ ಅವರ ಪಾತ್ರ ಮಹತ್ವದ್ದಾಗಿತ್ತು. ದಲಿತ ಚಳವಳಿಯ ಹಿರಿಯ ಹೋರಾಟಗಾರರಾದ ಸಕಲೇಶಪುರದ ಹಾಡ್ಯದ ಜಿ. ಸೋಮಶೇಖರ್ ಅವರು ಮಂಗಳೂರಿನ ನವಭಾರತ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ದೇವದಾಸ್ ಅವರನ್ನು ಸಂಪರ್ಕಿಸಿ ಮಂಗಳೂರಿನಲ್ಲಿ ಡಿ.ಎಸ್.ಎಸ್. ಸಂಘಟನೆಯನ್ನು ಆರಂಭಿಸಲು ಪ್ರೇರೇಪಿಸಿದ್ದರು. ಬಳಿಕ ದೇವದಾಸ್ ಅವರು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಘಟನೆಯನ್ನು ವಿಸ್ತರಿಸಿ, ದಲಿತರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದರು.
ಜಿಲ್ಲೆಯ ಮೂಲೆ ಮೂಲೆಗೂ ದಲಿತ ಸಂಘರ್ಷ ಸಮಿತಿಯನ್ನು ಪಸರಿಸಲು ಶ್ರಮಿಸಿದ ಅವರು, ದಲಿತ ಚಳವಳಿಯ ಸಾಕ್ಷಿ ಪ್ರಜ್ಞೆಯಾಗಿ ಗುರುತಿಸಿಕೊಂಡಿದ್ದರು. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳ ಪರ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 2.00 ಗಂಟೆಯಿಂದ ಮಂಗಳೂರಿನ ಬಜಪೆ ಸಿದ್ದಾರ್ಥ ನಗರದ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಸಂಜೆ 4.00 ಗಂಟೆಗೆ ಸಿದ್ದಾರ್ಥ ನಗರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಎಂ. ದೇವದಾಸ್ ಅವರ ನಿಧನಕ್ಕೆ ವಿವಿಧ ಸಾಮಾಜಿಕ ಸಂಘಟನೆಗಳು, ದಲಿತ ಹೋರಾಟಗಾರರು, ರಾಜಕೀಯ ನಾಯಕರು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.