Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ವಿದ್ಯುತ್ ಮಾರ್ಗಕ್ಕೆ ಭೂಮಿ ನೀಡಿದ ರೈತರಿಗೆ ಸನ್ಮಾನ

ವಿದ್ಯುತ್ ಮಾರ್ಗಕ್ಕೆ ಭೂಮಿ ನೀಡಿದ ರೈತರಿಗೆ ಸನ್ಮಾನ

ಕೂಡ್ಲಿಗಿ : ರಾಷ್ಟ್ರೀಯ ವಿದ್ಯುತ್ ಪ್ರಸರಣ ಯೋಜನೆಯಡಿ ನವೀಕರಿಸಬಹುದಾದ ಇಂಧನ ಯೋಜನಾ ಮಾರ್ಗಗಳ ನಿರ್ಮಾಣಕ್ಕೆ ಭೂಮಿ ನೀಡಿ ಸಹಕರಿಸಿದ ತಾಲೂಕಿನ ಜುಮ್ಮೋಬನಹಳ್ಳಿ ಹಾಗೂ ಕೊಂಬೆಹಳ್ಳಿ ರೈತರನ್ನು ರೆಸೋನಿಯಾ ಕಂಪನಿಯಿಂದ ಮಂಗಳವಾರ ಸನ್ಮಾನಿಸಲಾಯಿತು.

ರೆಸೋನಿಯಾ ಕಂಪನಿ ವ್ಯವಸ್ಥಾಪಕ ಆದಿತ್ಯ ಮೋಹನ್ ಮಾತನಾಡಿ, ರಾಜ್ಯದ ವಿಜಯನಗರ, ದಾವಣಗೆರೆ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿಯಾಗುತ್ತಿದೆ. ಇಲ್ಲಿನ ಅಭಿವೃದ್ಧಿ ಮತ್ತು ಕೈಗಾರಿಕೆಗಳಿಗೆ ಹೆಚ್ಚಿನ ವಿದ್ಯುತ್ ಅಗತ್ಯವಿದೆ. ಆಂಧ್ರದ ಅನಂತಪುರ ಭಾಗದಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ವಿದ್ಯುತ್ ತಯಾರಿಕೆ ಹೆಚ್ಚಿದ್ದು, ಅದನ್ನು ಇಲ್ಲಿಗೆ ವರ್ಗಾಯಿಸಲು ೭೬೫ ಕೆವಿ ವಿದ್ಯುತ್ ಮಾರ್ಗವನ್ನು ರೂಪಿಸಲಾಗಿದೆ.‌ ಇದರಿಂದಾಗಿ ಈ ಭಾಗಕ್ಕೆ ಕೈಗಾರಿಕೆ, ಅಭಿವೃದ್ಧಿ ಸೇರಿ ರೈತರಿಗೆ ಉತ್ತಮ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. ಅಲ್ಲದೆ, ಗುಣಮಟ್ಟದ ವಿದ್ಯುತ್ ಪೂರೈಕೆಯ ಜತೆಗೆ ಪ್ರತಿ ವಿದ್ಯುತ್ ಯೂನಿಟ್ ದರ ಕೂಡ ಕಡಿಮೆಯಾಗಲಿದೆ. ರೈತರ ನೀರಾವರಿಗೆ ನಿರಂತರ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದ್ದು, ಲೋಡ್ ಶೆಡ್ಡಿಂಗ್ ಸಹ ಕಡಿಮೆಯಾಗಲಿದೆ. ಸ್ವಚ್ಛ ಮತ್ತು ನವೀಕರಿಸುವ ಇಂಧನದ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಗೆ ಭೂಮಿಯನ್ನು ನೀಡುವ ಮೂಲಕ ಪಾಲುದಾರರಾಗಿರುವ ರೈತರು ಅಭಿವೃದ್ಧಿ ಮತ್ತು ರಾಷ್ಟ್ರದ ನಿರ್ಮಾಣದಲ್ಲಿ ಕೈಜೋಡಿಸಲು ನೆರವಾಗಿರುವುದು ಖುಷಿಯಾಗಿದೆ ಎಂದು ತಿಳಿಸಿದರು.

ಜುಮ್ಮೋಬನಹಳ್ಳಿಯ ನಿವೃತ್ತ ಶಿಕ್ಷಕ ಸಿ.ತಿಪ್ಪಣ್ಣ ಮಾತನಾಡಿ, ದೇಶದ ಅಭಿವೃದ್ಧಿಗೆ ವಿದ್ಯುತ್ ಹಾಗೂ ಸ್ವಚ್ಛ ಇಂಧನಗಳು ಬಹಳ ಮುಖ್ಯ. ಟವರ್ ಗಳ ಸ್ಥಾಪನೆಗೆ ಭೂಮಿ ನೀಡಿದರೆ ರೈತರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಬದಲಾಗಿ ಆರ್ಥಿಕವಾಗಿ ಅನುಕೂಲ ಮತ್ತು ಪರಿಹಾರ ದೊರೆಯುತ್ತದೆ. ಇಂಥ ನವೀಕರಿಸಬಹುದಾದ ಇಂಧನದ ಯೋಜನೆಗಳಿಂದ ಈಗ ಎದುರಾಗಿರುವ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಪೆಟ್ರೋಲಿಯಂ ಇಂಧನಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಇವುಗಳ ಮೇಲಿನ ವೆಚ್ಚದ ಉಳಿತಾಯದಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ತಿಳಿಸಿದರು. ರೈತರಾದ ಬೋರಯ್ಯ, ಪಾಪಣ್ಣ, ಕೊಂಬೆಹಳ್ಳಿ ಕರಿಯಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಕಂಪನಿಯ ವಿಭಾಗೀಯ ಯೋಜನಾ ವ್ಯವಸ್ಥಾಪಕ ಹರೇಂದ್ರ ಪಾಂಡೆ, ಸಿಬ್ಬಂದಿ ಗಾದಿಲಿಂಗಪ್ಪ, ಬಿಲಾಲ್, ಮಾಲತೇಶ್, ರೈತರಾದ ಹಿಮಂತ್ ರಾಜ್, ಸಣ್ಣ ಓಬಯ್ಯ, ಯುವ ರೈತ ಮಹೇಶ್ ಸೇರಿ ಜುಮ್ಮೋಬನಹಳ್ಳಿ, ಕೊಂಬಿಹಳ್ಳಿ ಗ್ರಾಮಗಳ ರೈತರು ಇದ್ದರು.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ
Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading