ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಹಾಗೂ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ನ (IJU) ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಮುರುಗೇಶ ಬಿ. ಶಿವಪೂಜಿ ಅವರ ನೇತೃತ್ವದ ನಿಯೋಗವು ಇಂದು ಗೌರವಾನ್ವಿತ ರಾಜ್ಯಪಾಲ ಶ್ರೀ. ಥಾವರಚಂದ್ ಗೆಹೋಟ್ ಅವರನ್ನು ಭೇಟಿಯಾಗಿ, ಇಂಡಿಯನ್ ಜರ್ನಲಿಸ್ಟ್ ಯೂನಿಯನ್ನ ರಾಷ್ಟ್ರೀಯ ಕೌನ್ಸಿಲ್ ಸಭೆಗೆ ಅಧಿಕೃತ ಆಹ್ವಾನವನ್ನು ಸಲ್ಲಿಸಿತು.
ಈ ಸಭೆಯನ್ನು ಫೆಬ್ರವರಿ 19, 20 ಮತ್ತು 21ರಂದು ಆಯೋಜಿಸಲಾಗಿದ್ದು, ಅದರ ಉದ್ಘಾಟನಾ ಸಮಾರಂಭಕ್ಕೆ ರಾಜ್ಯಪಾಲರನ್ನು ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಆಹ್ವಾನಿಸಲಾಯಿತು. ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಪತ್ರಕರ್ತರ ಪ್ರತಿನಿಧಿಗಳು ಭಾಗವಹಿಸಲಿದ್ದು, ಪತ್ರಿಕೋದ್ಯಮದ ಸ್ವಾತಂತ್ರ್ಯ, ಪತ್ರಕರ್ತರ ಹಕ್ಕುಗಳು, ವೃತ್ತಿಪರ ಸವಾಲುಗಳು ಹಾಗೂ ಸಂಘಟನೆ ಬಲಪಡಿಸುವ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ.
ರಾಜ್ಯಪಾಲರ ಭೇಟಿಯ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮಂಗಳೂರು ಸುದೇಶಕುಮಾರ, ಬಳ್ಳಾರಿ ಜಿಲ್ಲಾಧ್ಯಕ್ಷ ಯಾ. ವಲಿಭಾಷಾ, ಜಿಲ್ಲಾ ಉಪಾಧ್ಯಕ್ಷ ಕೆ. ಬಜಾರಪ್ಪ, ಹಾಗೂ ರಾಜ್ಯ ಪದಾಧಿಕಾರಿಗಳಾದ ದತ್ತಾತ್ರೇಯ ಹೆಗಡೆ ಮತ್ತು ರುಕ್ಕಾಂಗದ ಕೆ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.