ಬಂಟ್ವಾಳ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಹೆಸರನ್ನು ಅಳಿಸಿ ‘ಜೈ ರಾಮಜಿ’ ಎಂಬ ಹೆಸರನ್ನು ಬಳಸಲಾಗುತ್ತಿದ್ದು, ಜೊತೆಗೆ ಯೋಜನೆಯ ಫಲಾನುಭವಿಗಳನ್ನು ಕಡಿತಗೊಳಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತೀವ್ರ ವಿರೋಧ ವ್ಯಕ್ತಪಡಿಸಲಾಗಿದೆ.
ಈ ಹಿನ್ನೆಲೆ “ನರೇಗಾ ಬಚಾವೋ ಸಂಗ್ರಾಮ್” ಎಂಬ ಹೆಸರಿನಡಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ದಿನಾಂಕ ಜ.28 ಬುಧವಾರ ಬೆಳಿಗ್ಗೆ ಗಂಟೆ 9.30ಕ್ಕೆ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆ ನಡೆಯಲಿದೆ.
ಪಾದಯಾತ್ರೆ ಮಣಿಹಳ್ಳದಿಂದ ಆರಂಭವಾಗಿ ಬಂಟ್ವಾಳ ಪೇಟೆ ಮೂಲಕ ಶ್ರೀ ನಾರಾಯಣ ಗುರು ವೃತ್ತ ತಿರುಗಿ ಬಿ.ಸಿ.ರೋಡ್ ಕೈಕಂಬದವರೆಗೆ ಸಾಗಲಿದೆ. ನಂತರ ಅಲ್ಲಿಂದ ಹಿಂದಿರುಗಿ ಮಿನಿ ವಿಧಾನಸೌಧದ ಮೂಲಕ ತಾಲ್ಲೂಕು ಕಚೇರಿ ಎದುರು ಪ್ರತಿಭಟನಾ ಸಭೆ ನಡೆಯಲಿದೆ.
ಈ ಕಾರ್ಯಕ್ರಮವನ್ನು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯುಕ್ತವಾಗಿ ಆಯೋಜಿಸಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಸಚಿವ ಶ್ರೀ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಹೋರಾಟ ನಡೆಯಲಿದೆ.
ಪಕ್ಷದ ಮುಖಂಡರು, ವಲಯ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಬೂತ್ ಮಟ್ಟದ ಸದಸ್ಯರು ಹಾಗೂ ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.