ಮಂಗಳೂರು: ಸಮಾಜ ಸೇವೆ ಎಂದರೆ ಕೇವಲ ಮಾತಲ್ಲ, ಅದನ್ನು ಕಾರ್ಯರೂಪಕ್ಕೆ ತರುವ ಬದುಕಿನ ಶೈಲಿಯೇ ಲಯನ್ ಶಶಿಧರ್ ಕೆ. ಕಾಡುಮಠ ಅವರ ಗುರುತು. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಮಾನವೀಯ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ತೊಡಗಿಸಿಕೊಂಡಿರುವ ಅವರ ಸೇವಾ ಪಯಣವನ್ನು ಗುರುತಿಸಿ ನ್ಯಾಷನಲ್ ಕ್ರೈಮ್ ಕಂಟ್ರೋಲ್ ಬೋರ್ಡ್ ನ ಸಂಸ್ಥಾಪಕರಾದ ಡಾ ಮುರಳೀಧರ್ ಅವರು ಸೇವಾ ರತ್ನ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿದರು. ಮೈಸೂರಿನಲ್ಲಿ ನ್ಯಾಷನಲ್ ಕ್ರೈಮ್ ಕಂಟ್ರೋಲ್ ಬೋರ್ಡ್ ಹಾಗೂ ವುಮೆನ್ ಎಂಪವರ್ಮೆಂಟ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೊಲ್ನಾಡು ಗ್ರಾಮ, ಬಂಟ್ವಾಳ ತಾಲೂಕಿನಿಂದ ಹೊರಟ ಶಶಿಧರ್ ಕಾಡುಮಠ ಅವರು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದು, 23 ಬಾರಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹತ್ವದ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಹೆಚ್ಐವಿ ಪೀಡಿತ ಅನಾಥ ಮಕ್ಕಳ ನೆರವಿಗಾಗಿ ವೈಯಕ್ತಿಕ ಹಾಗೂ ಸಾರ್ವಜನಿಕ ಸಹಕಾರದಿಂದ ಧನ ಸಂಗ್ರಹಿಸಿ ಸಹಾಯ ಹಸ್ತ ಚಾಚಿರುವುದು ಅವರ ಮಾನವೀಯ ಮನಸ್ಸಿನ ಪ್ರತಿಬಿಂಬವಾಗಿದೆ.
ಜೆಸಿಐ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರಾಗಿ ನೂರಕ್ಕೂ ಹೆಚ್ಚು ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ಯಶಸ್ವಿಯಾಗಿ ನಡೆಸಿರುವ ಅವರು, ಉದ್ಯೋಗ, ಬಿಸಿನೆಸ್ ಮತ್ತು ಜೀವನ ಕೌಶಲ್ಯಗಳಿಗೆ ಸಂಬಂಧಿಸಿದ ತರಬೇತಿಗಳ ಮೂಲಕ ಸಾವಿರಾರು ಜನರಿಗೆ ದಿಕ್ಕು ತೋರಿದ್ದಾರೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಮತ್ತು ಕಲಿಕಾ ಅರಿವು ಮೂಡಿಸುವಲ್ಲಿ ಅವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಕ್ಕಳ ಹಕ್ಕುಗಳ ಕುರಿತು “ಪಡಿ ಮತ್ತು ವೆಲೆರೊಡ್” ಸಂಸ್ಥೆಯೊಂದಿಗೆ ಎರಡು ವರ್ಷಗಳ ಕಾಲ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಿದ್ದು, ಬೊಲ್ಪು ಕಲಾತಂಡದ ಸದಸ್ಯರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸಿರುವುದು ಅವರ ಸಾಂಸ್ಕೃತಿಕ ಬದ್ಧತೆಯನ್ನು ತೋರಿಸುತ್ತದೆ.

ಕರೋನಾ ಸಂಕಷ್ಟದ ಸಮಯದಲ್ಲಿ ನೂರಾರು ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಿ ಮಾನವೀಯತೆ ಮೆರೆದ ಅವರು, ಪ್ರತಿವರ್ಷ ಬಡ ವಿದ್ಯಾರ್ಥಿಗಳು ಹಾಗೂ ಅತ್ಯಧಿಕ ಅಂಕ ಪಡೆದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪ್ರೋತ್ಸಾಹ ಧನ ನೀಡುವ ಮೂಲಕ ಶಿಕ್ಷಣಕ್ಕೆ ಬೆಂಬಲ ನೀಡುತ್ತಿದ್ದಾರೆ.
2018ರಲ್ಲಿ ಆರಂಭವಾದ SWS ಮಾರ್ಕೆಟಿಂಗ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಉತ್ತಮ ಆರೋಗ್ಯ, ಆರ್ಥಿಕ ಭದ್ರತೆ ಮತ್ತು ಉದ್ಯೋಗ ಸೃಷ್ಟಿಯ ಉದ್ದೇಶದಿಂದ ದೇಶದಾದ್ಯಂತ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ಸಂಸ್ಥೆಯ ಮೂಲಕ 10,000ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಒದಗಿಸಿರುವುದು ಗಮನಾರ್ಹ ಸಾಧನೆಯಾಗಿದೆ.
ಪ್ರಸ್ತುತ ಕಲ್ಪವೃಕ್ಷ ಲಯನ್ಸ್ ಕ್ಲಬ್ ಮಂಗಳೂರು ಪಂಪ್ವೆಲ್ ಇದರ ಸಕ್ರಿಯ ಸದಸ್ಯರಾಗಿರುವ ಶಶಿಧರ್ ಕಾಡುಮಠ ಅವರು ಸಂಗೀತ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿದ್ದು, ಗಾಯಕ ಹಾಗೂ ಕಾರ್ಯಕ್ರಮ ನಿರೂಪಕರಾಗಿ ವಿಭಿನ್ನ ವೇದಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಇಂತಹ ಬಹುಮುಖ ಸೇವಾ ಸಾಧನೆಯನ್ನು ಗುರುತಿಸಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಸಮಾಜಕ್ಕೆ ಪ್ರೇರಣೆಯಾಗಿದೆ.