ಮೈಸೂರು: ಮೀಸಲಾತಿ ವ್ಯವಸ್ಥೆ ಕುರಿತು ಅವಹೇಳನಕಾರಿ ಹಾಗೂ ದ್ವೇಷ ಪ್ರಚೋದಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯ ಆಂಕರ್ ಅರುಣ್ ಬಡಿಗೇರ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಮೈಸೂರು ನಿವಾಸಿಗಳಾದ ಕೆ.ಟಿ. ರಮೇಶ್ ಮತ್ತು ಮನೋಜ್ ಕುಮಾರ್ ಅವರು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ದೂರುದಾರರ ಪ್ರಕಾರ, ಜುಲೈ 25ರಂದು ಪ್ರಸಾರವಾದ ಪಬ್ಲಿಕ್ ಟಿವಿಯ ‘ಬಿಗ್ ಬುಲೆಟಿನ್’ ಕಾರ್ಯಕ್ರಮದಲ್ಲಿ ಅರುಣ್ ಬಡಿಗೇರ್ ಅವರು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಇತರ ಹಿಂದುಳಿದ ವರ್ಗಗಳಿಗೆ (OBC) ನೀಡಲಾಗಿರುವ ಮೀಸಲಾತಿ ವ್ಯವಸ್ಥೆಯನ್ನು ಟೀಕಿಸುವ ಸಂದರ್ಭದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಪಬ್ಲಿಕ್ ಟಿವಿಯ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಆಗಿರುವ ಕಾರ್ಯಕ್ರಮದ ವಿಡಿಯೋದ 00:05:36 ರಿಂದ 00:06:23 ಅವಧಿಯಲ್ಲಿ ಅವರು ಮೀಸಲಾತಿ ಪಡೆದವರು ಕಡಿಮೆ ಅಂಕಗಳನ್ನು ಪಡೆದು ಶಿಕ್ಷಕರು, ವೈದ್ಯರು ಹಾಗೂ ಇಂಜಿನಿಯರ್ಗಳಾಗುವುದರಿಂದ ಗುಣಮಟ್ಟ ಕುಸಿಯುತ್ತದೆ ಎಂಬ ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹೇಳಿಕೆಗಳು ಮೀಸಲಾತಿ ವ್ಯವಸ್ಥೆ ಹಾಗೂ ಅದರ ಫಲಾನುಭವಿಗಳ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮತ್ತು ದ್ವೇಷವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ದೂರುದಾರರು ಆರೋಪಿಸಿದ್ದಾರೆ.
ದೂರುದಾರರು, ಮೀಸಲಾತಿ ವ್ಯವಸ್ಥೆಯು ಭಾರತದ ಸಂವಿಧಾನವು ಕಲ್ಪಿಸಿರುವ ಸಾಮಾಜಿಕ ನ್ಯಾಯದ ಒಂದು ಪ್ರಮುಖ ಸಾಧನವಾಗಿದ್ದು, ಅದರ ಬಗ್ಗೆ ಅವಹೇಳನಕಾರಿ ಹೇಳಿಕೆಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಅರುಣ್ ಬಡಿಗೇರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.