ಅಭಿವ್ಯಕ್ತಿ ಸ್ವಾತಂತ್ರ್ಯವು ಯಾವುದೇ ಪ್ರಜಾಸತ್ತಾತ್ಮಕ ಸಮಾಜದ ಜೀವಾಳ. ವ್ಯಕ್ತಿಯು ತನ್ನ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾಗ ಮಾತ್ರ ಆ ಸಮಾಜದಲ್ಲಿ ಚಿಂತನೆಯ ವಿಸ್ತಾರ, ವಿಮರ್ಶಾತ್ಮಕ ಚರ್ಚೆ ಮತ್ತು ಸಾಮಾಜಿಕ ಪ್ರಗತಿ ಸಾಧ್ಯವಾಗುತ್ತದೆ. ಭಾರತಂಥ ವೈವಿಧ್ಯಮಯ ರಾಷ್ಟ್ರದಲ್ಲಿ ಈ ಸ್ವಾತಂತ್ರ್ಯ ಇನ್ನಷ್ಟು ಮಹತ್ವ ಪಡೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ “ಅಭಿವ್ಯಕ್ತಿ ಸ್ವಾತಂತ್ರ್ಯ” ಎಂಬ ಪದದ ಜೊತೆ “ಹೇಟ್ ಸ್ಪೀಚ್” ಎಂಬ ಅಪಾಯಕಾರಿ ಪ್ರವೃತ್ತಿಯೂ ಒಂದೇ ಉಸಿರಲ್ಲಿ ಚರ್ಚೆಯಾಗುತ್ತಿರುವುದು ಆತಂಕಕಾರಿ ಸಂಗತಿ.
ಭಾರತೀಯ ಸಂವಿಧಾನದ ವಿಧಿ 19(1)(a) ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಮಾತನಾಡುವುದು, ಬರೆಯುವುದು, ಕಲೆ, ಸಾಹಿತ್ಯ, ಮಾಧ್ಯಮಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸುವುದು—ಇವೆಲ್ಲವು ಈ ಹಕ್ಕಿನ ವ್ಯಾಪ್ತಿಗೆ ಬರುತ್ತವೆ. ಆಡಳಿತವನ್ನು ಪ್ರಶ್ನಿಸುವುದು, ಸಾಮಾಜಿಕ ಅನ್ಯಾಯವನ್ನು ಬಹಿರಂಗಪಡಿಸುವುದು ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಈ ಹಕ್ಕಿನ ಸಹಜ ಅಂಗಗಳಾಗಿವೆ. ಇತಿಹಾಸದಲ್ಲಿ ಅನೇಕ ಸಾಮಾಜಿಕ ಚಳವಳಿಗಳು ಮತ್ತು ಸುಧಾರಣೆಗಳು ಇದೇ ಸ್ವಾತಂತ್ರ್ಯದ ಫಲವಾಗಿ ಉದ್ಭವಿಸಿವೆ.
ಆದರೆ ಸಂವಿಧಾನವು ಈ ಸ್ವಾತಂತ್ರ್ಯವನ್ನು ನಿರ್ಬಂಧರಹಿತವಾಗಿಟ್ಟಿಲ್ಲ. ವಿಧಿ 19(2) ಸಾರ್ವಜನಿಕ ಶಾಂತಿ, ನೈತಿಕತೆ, ರಾಷ್ಟ್ರ ಭದ್ರತೆ ಮತ್ತು ಇತರರ ಗೌರವವನ್ನು ರಕ್ಷಿಸುವ ಉದ್ದೇಶದಿಂದ ಸಮಂಜಸವಾದ ನಿರ್ಬಂಧಗಳನ್ನು ವಿಧಿಸುತ್ತದೆ. ಈ ನಿರ್ಬಂಧಗಳ ಹಿನ್ನೆಲೆಯಲ್ಲಿಯೇ ಹೇಟ್ ಸ್ಪೀಚ್ ಕುರಿತು ಚರ್ಚೆ ಆರಂಭವಾಗುತ್ತದೆ.
ಹೇಟ್ ಸ್ಪೀಚ್ ಎಂದರೆ ಕೇವಲ ಕಠಿಣ ಅಥವಾ ಅಸಹಮತಿಯ ಮಾತು ಅಲ್ಲ. ಅದು ನಿರ್ದಿಷ್ಟ ವ್ಯಕ್ತಿ ಅಥವಾ ಸಮುದಾಯವನ್ನು ಅವರ ಧರ್ಮ, ಜಾತಿ, ಭಾಷೆ, ಲಿಂಗ, ವಂಶ ಅಥವಾ ಗುರುತಿನ ಆಧಾರದ ಮೇಲೆ ಅವಮಾನಿಸುವುದು, ದ್ವೇಷ ಹುಟ್ಟಿಸುವುದು ಅಥವಾ ಹಿಂಸೆಗೆ ಪ್ರಚೋದಿಸುವ ಮಾತು. ಇಂತಹ ಭಾಷಣಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲ ಉದ್ದೇಶವಾದ ಸಂವಾದ ಮತ್ತು ಚಿಂತನೆಗೆ ಬದಲಾಗಿ ಭಯ, ಅಸುರಕ್ಷತೆ ಮತ್ತು ಸಾಮಾಜಿಕ ವಿಭಜನೆಯನ್ನು ಸೃಷ್ಟಿಸುತ್ತವೆ.
ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯಿಂದ ಅಭಿವ್ಯಕ್ತಿ ವೇದಿಕೆಗಳು ವ್ಯಾಪಕಗೊಂಡಿವೆ. ಸಾಮಾಜಿಕ ಮಾಧ್ಯಮಗಳು ಪ್ರತಿಯೊಬ್ಬನಿಗೂ ತನ್ನ ಅಭಿಪ್ರಾಯವನ್ನು ತಕ್ಷಣವೇ ಸಾವಿರಾರು ಜನರಿಗೆ ತಲುಪಿಸುವ ಶಕ್ತಿಯನ್ನು ನೀಡಿವೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಜಾಸತ್ತಾತ್ಮಕ ವೆಂದು ಕಾಣಿಸಬಹುದು. ಆದರೆ ನಿಯಂತ್ರಣ ಮತ್ತು ಜವಾಬ್ದಾರಿಯ ಕೊರತೆಯಿಂದಾಗಿ ಹೇಟ್ ಸ್ಪೀಚ್ ವೇಗವಾಗಿ ಹರಡುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ರಾಜಕೀಯ ಧ್ರುವೀಕರಣ, ಜನಪ್ರಿಯತೆಗಾಗಿ ಮಾಡುವ ಉಗ್ರ ಭಾಷಣಗಳು ಮತ್ತು ಭಾವನಾತ್ಮಕ ಪ್ರಚೋದನೆಗಳು ಈ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿವೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹೇಟ್ ಸ್ಪೀಚ್ ನಡುವಿನ ಗಡಿ ಸೂಕ್ಷ್ಮವಾದುದು. ಸರ್ಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸುವುದು, ಧಾರ್ಮಿಕ ಆಚರಣೆಗಳನ್ನು ಪ್ರಶ್ನಿಸುವುದು ಅಥವಾ ಸಾಮಾಜಿಕ ವ್ಯವಸ್ಥೆಯಲ್ಲಿನ ದೋಷಗಳನ್ನು ಬಹಿರಂಗಪಡಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ. ಆದರೆ ಅದೇ ಟೀಕೆ ಒಂದು ಸಮುದಾಯವನ್ನು ಮಾನವೀಯ ಗೌರವದಿಂದ ವಂಚಿಸುವ ಮಟ್ಟಕ್ಕೆ ಇಳಿದಾಗ, ಅದು ಹೇಟ್ ಸ್ಪೀಚ್ ಆಗುತ್ತದೆ. ಮೊದಲನೆಯದು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಲಪಡಿಸಿದರೆ, ಎರಡನೆಯದು ಅದನ್ನು ದುರ್ಬಲಗೊಳಿಸುತ್ತದೆ.
ಇನ್ನೊಂದು ಗಂಭೀರ ಸಮಸ್ಯೆ ಎಂದರೆ, ಹೇಟ್ ಸ್ಪೀಚ್ ಅನ್ನು ಕೆಲವೊಮ್ಮೆ “ಸ್ವತಂತ್ರ ಅಭಿವ್ಯಕ್ತಿ” ಎಂಬ ಹೊದಿಕೆಯಲ್ಲಿ ಸಮರ್ಥಿಸುವುದು. ಮತ್ತೊಂದೆಡೆ, ಸರ್ಕಾರ ಅಥವಾ ಪ್ರಭುತ್ವದ ವಿರುದ್ಧದ ನ್ಯಾಯಸಮ್ಮತ ಟೀಕೆಗಳನ್ನು ಹೇಟ್ ಸ್ಪೀಚ್ ಅಥವಾ ದೇಶದ್ರೋಹ ಎಂದು ಗುರುತಿಸಿ ಮೌನಗೊಳಿಸುವ ಪ್ರಯತ್ನಗಳೂ ನಡೆಯುತ್ತಿವೆ. ಈ ಎರಡೂ ಅತಿರೇಕಗಳು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಕ್ಕೆ ಅಪಾಯಕಾರಿಯಾಗಿದೆ.
ನ್ಯಾಯಾಲಯಗಳು ಹಲವು ಸಂದರ್ಭಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿಹೇಳಿದ್ದರೂ, ದ್ವೇಷ ಭಾಷಣವನ್ನು ನಿಯಂತ್ರಿಸುವ ಅಗತ್ಯವನ್ನೂ ಸ್ಪಷ್ಟಪಡಿಸಿವೆ. ಆದರೆ ಕಾನೂನು ಕ್ರಮ ಮಾತ್ರ ಈ ಸಮಸ್ಯೆಗೆ ಸಂಪೂರ್ಣ ಪರಿಹಾರವಲ್ಲ. ಹೇಟ್ ಸ್ಪೀಚ್ ಒಂದು ಸಾಮಾಜಿಕ ಮತ್ತು ನೈತಿಕ ಸಮಸ್ಯೆ; ಅದನ್ನು ಎದುರಿಸಲು ಶಿಕ್ಷಣ, ಮಾಧ್ಯಮ ಜವಾಬ್ದಾರಿ ಮತ್ತು ನಾಗರಿಕ ಸಂವೇದನೆ ಅಗತ್ಯ.
ಅಭಿವ್ಯಕ್ತಿ ಸ್ವಾತಂತ್ರ್ಯವು ಹಕ್ಕು ಮಾತ್ರವಲ್ಲ, ಅದು ಜವಾಬ್ದಾರಿಯೂ ಹೌದು. ಮಾತುಗಳು ಸಮಾಜವನ್ನು ಕಟ್ಟಬಹುದು ಅಥವಾ ಒಡೆಯಬಹುದು. ಭಿನ್ನಾಭಿಪ್ರಾಯಗಳು ಪ್ರಜಾಸತ್ತಾತ್ಮಕ ಸಮಾಜದ ಶಕ್ತಿ; ದ್ವೇಷಭರಿತ ಭಾಷಣಗಳು ಅದರ ದುರ್ಬಲತೆ. ಈ ವ್ಯತ್ಯಾಸವನ್ನು ಅರಿತುಕೊಳ್ಳುವ ಪ್ರಜ್ಞೆ ನಾಗರಿಕರಲ್ಲಿ ಬೆಳೆದು ಬರಬೇಕಿದೆ.
ಅಂತಿಮವಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹೇಟ್ ಸ್ಪೀಚ್ ನಡುವಿನ ಸಮತೋಲನವೇ ಪ್ರಜಾಸತ್ತಾತ್ಮಕ ಭಾರತದ ಭವಿಷ್ಯವನ್ನು ನಿರ್ಧರಿಸುತ್ತದೆ. ಸ್ವಾತಂತ್ರ್ಯವನ್ನು ಉಳಿಸಿಕೊಂಡು, ದ್ವೇಷವನ್ನು ತಡೆಯುವ ನೈತಿಕ ಹಾಗೂ ಕಾನೂನು ಚೌಕಟ್ಟು ಬಲವಾಗಬೇಕು. ಸಂವಿಧಾನದ ಆತ್ಮವನ್ನು ಕೇವಲ ಪಠ್ಯದಲ್ಲಿ ಅಲ್ಲ, ಸಾಮಾಜಿಕ ನಡೆ-ನುಡಿಗಳಲ್ಲಿಯೂ ಅನುಸರಿಸಿದಾಗ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾಜದ ಒಗ್ಗಟ್ಟಿಗೆ ಮತ್ತು ಪ್ರಗತಿಗೆ ದಾರಿ ಮಾಡಿಕೊಡುತ್ತದೆ.
😀0😍0😢0😡0👍3👎0