ಬೆಳ್ಳಾರೆ ಸಮೀಪದ ಮುಡಾಯಿತೋಟದಲ್ಲಿ ಭೀಮರಾವ್ ಸೇವಾ ಸಮಿತಿ ಹಾಗೂ ಆದಿದ್ರಾವಿಡ ಯುವ ವೇದಿಕೆ ಘಟ ಸಮಿತಿ ಬೆಳ್ಳಾರೆ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷರಾಗಿ ರಮೇಶ್ ಮುಡಾಯಿತೋಟ ವಹಿಸಿಕೊಂಡಿದ್ದು, ಕಾರ್ಯಕ್ರಮವನ್ನು ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ರಮೇಶ್ ಬೂಡು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನೆಹರು ಮೆಮೋರಿಯಲ್ ಕಾಲೇಜು, ಕುರುಂಜಿಬಾಗ್ ಸುಳ್ಯದ ಉಪನ್ಯಾಸಕರಾದ ಚಂದ್ರಶೇಖರ ಮೊರಂಗಲು, ಯುವ ವೇದಿಕೆಯ ತಾಲೂಕು ಸಮಿತಿ ಕಾರ್ಯದರ್ಶಿ ಶಶಿಕಾಂತ್ ಮುಳ್ಯಕಜೆ, ಗೋಪಾಲ್ ಅರಂಬೂರು, ಸುಂದರ್ ಭೇರ್ಯ, ಯುವ ವೇದಿಕೆಯ ಘಟ ಸಮಿತಿ ಅಧ್ಯಕ್ಷ ನವೀನ್ ಸೇರಿದಂತೆ ಊರಿನ ಹಿರಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆದಿದ್ರಾವಿಡ ಯುವ ವೇದಿಕೆ ಸಮೂಹ ಸಮಿತಿಗಳ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಅಂಬೇಡ್ಕರ್ ಜಯಂತಿ ಅಂಗವಾಗಿ ಆಟೋಟ ಸ್ಪರ್ಧೆಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪನ್ಯಾಸಕರಾದ ಚಂದ್ರಶೇಖರ ಮೊರಂಗಲು ಅವರು, ಡಾ. ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಅವರ ನಿಲುವುಗಳ ಬಗ್ಗೆ ಇಂದಿನ ಸಮಾಜದಲ್ಲಿ ಮೂಡಿರುವ ಮನಸ್ಥಿತಿಯನ್ನು ವಿಶ್ಲೇಷಿಸಿದರು. ಮೀಸಲಾತಿ ಕುರಿತು ಇರುವ ತಪ್ಪು ಕಲ್ಪನೆಗಳು, ಸಂವಿಧಾನ ನೀಡಿರುವ ಹಕ್ಕುಗಳು ಹಾಗೂ ಶಿಕ್ಷಣದ ಮೂಲಕ ಸಮಾಜದಲ್ಲಿ ಸಾಧ್ಯವಾಗುವ ಬದಲಾವಣೆಗಳ ಕುರಿತು ಅವರು ಬೆಳಕು ಚೆಲ್ಲಿದರು.
ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಮಾತನಾಡಿ, ಡಾ. ಅಂಬೇಡ್ಕರ್ ಅವರ ಬಗ್ಗೆ ನಡೆಯುತ್ತಿರುವ ಸುಳ್ಳು ಅಪಪ್ರಚಾರಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತೇಜೋವಧೆಗಳ ಕುರಿತು ಕಳವಳ ವ್ಯಕ್ತಪಡಿಸಿದರು. ಮಕ್ಕಳಲ್ಲಿ ದುಶ್ಚಟಗಳು ಬೆಳೆಯದಂತೆ ಪೋಷಕರು ಜಾಗೃತರಾಗಬೇಕು ಎಂದು ಕರೆ ನೀಡಿದ ಅವರು, ಗೌರವಯುತ ಜೀವನ ನಡೆಸಲು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು
ಇನ್ನೊಬ್ಬ ಅತಿಥಿ ಶಶಿಕಾಂತ್ ಮುಳ್ಯಕಜೆ ಅವರು ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಸಂತೋಷ ವ್ಯಕ್ತಪಡಿಸಿ, ಅಸ್ಪೃಶ್ಯತೆ ಇಂದಿಗೂ ಮುಂದುವರಿಯುತ್ತಿರುವ ಕಾರಣಗಳು ಮತ್ತು ಅದರ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯತೆಯನ್ನು ವಿವರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಭೀಮರಾವ್ ಸೇವಾ ಸಮಿತಿ ಸದಸ್ಯೆ ಆಶಾ ನಿರ್ವಹಿಸಿದ್ದು, ಹರಿಣಿ ಮತ್ತು ಹರೀಶ್ ಮುಡಾಯಿತೋಟ ಅವರು ಉಪಸ್ಥಿತರಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.
