Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಔರಾದ ತಾಲ್ಲೂಕಿನ ಮುಂಗನಾಳ ಗ್ರಾಮದಲ್ಲಿ ಚಿರತೆ ದಾಳಿ ಶಂಕೆ – ನಾಪತ್ತೆಯಾದ ನಾಯಿ ಮರಿಗಳು, ಜಮೀನಿನಲ್ಲಿ ಜಿಂಕೆ ಅವಶೇಷ ಪತ್ತೆ ?

ಔರಾದ ತಾಲ್ಲೂಕಿನ ಮುಂಗನಾಳ ಗ್ರಾಮದಲ್ಲಿ ಚಿರತೆ ದಾಳಿ ಶಂಕೆ – ನಾಪತ್ತೆಯಾದ ನಾಯಿ ಮರಿಗಳು, ಜಮೀನಿನಲ್ಲಿ ಜಿಂಕೆ ಅವಶೇಷ ಪತ್ತೆ ?

ಬೀದರ್: ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಮುಂಗನಾಳ ಗ್ರಾಮದಲ್ಲಿ ಚಿರತೆ ದಾಳಿ ನಡೆದಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆಯ ವೇಳೆ ಗ್ರಾಮಸ್ಥರು ಅಧಿಕಾರಿಗಳಿಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಗ್ರಾಮದಲ್ಲಿ ನಾಲ್ಕು ನಾಯಿ ಮರಿಗಳು ನಾಪತ್ತೆಯಾಗಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಜೊತೆಗೆ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಜಿಂಕೆಯ ಕಿವಿ ಹಾಗೂ ಕಾಲುಗಳು ಪತ್ತೆಯಾಗಿವೆ ಎಂಬುದನ್ನೂ ಗ್ರಾಮಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಈ ಬೆಳವಣಿಗೆಗಳು ಚಿರತೆ ಅಥವಾ ಇತರ ಕಾಡುಪ್ರಾಣಿಗಳ ಸಂಚಲನ ಇರಬಹುದೆಂಬ ಶಂಕೆಗೆ ಕಾರಣವಾಗಿವೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಜಮೀನಿನಲ್ಲಿ ಕಂಡುಬಂದ ಅವಶೇಷಗಳನ್ನು ಪರಿಶೀಲಿಸಿ, ಪ್ರಾಣಿಗಳ ಗುರುತುಗಳು ಇದ್ದವೆಯೇ ಎಂಬುದರ ಬಗ್ಗೆ ಪರಿಶೋಧನೆ ನಡೆಸಿದರು. ಸದ್ಯಕ್ಕೆ ಚಿರತೆ ಇರುವುದನ್ನು ದೃಢಪಡಿಸುವ ನಿಖರ ಸಾಕ್ಷ್ಯ ದೊರಕಿಲ್ಲವಾದರೂ, ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಜಾಗೃತಿ ವಹಿಸಲು ಸೂಚಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ರಾತ್ರಿ ಸಮಯದಲ್ಲಿ ಒಂಟಿಯಾಗಿ ಸಂಚರಿಸಬಾರದು, ಮಕ್ಕಳನ್ನು ಹೊರಗಡೆ ಬಿಡದಂತೆ ನೋಡಿಕೊಳ್ಳಬೇಕು ಹಾಗೂ ಸಂಶಯಾಸ್ಪದ ಚಲನವಲನ ಕಂಡುಬಂದರೆ ತಕ್ಷಣ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದ್ದಾರೆ. ಅಗತ್ಯವಿದ್ದರೆ ಟ್ರ್ಯಾಪ್‌ ಕ್ಯಾಮೆರಾ ಅಳವಡಿಸಿ ಮುಂದಿನ ದಿನಗಳಲ್ಲಿ ನಿಗಾ ವಹಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ವರದಿ: ಅರವಿಂದ ಮಲ್ಲೀಗೆ

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading