Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಮಂಗಳೂರು: ಮೀನು ವ್ಯಾಪಾರಿ ಆರಿಫ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ – ಮೂವರು ಆರೋಪಿಗಳು ಪೊಲೀಸರ ವಶಕ್ಕೆ

ಮಂಗಳೂರು: ಮೀನು ವ್ಯಾಪಾರಿ ಆರಿಫ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ – ಮೂವರು ಆರೋಪಿಗಳು ಪೊಲೀಸರ ವಶಕ್ಕೆ

ಮಂಗಳೂರು: ಮಂಗಳೂರನ್ನು ಬೆಚ್ಚಿಬೀಳಿಸಿದ ಮೀನು ವ್ಯಾಪಾರಿ ಆರಿಫ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಈ ಪ್ರಕರಣದ ತನಿಖೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು CCB ಪೊಲೀಸರಿಗೆ ಒಪ್ಪಿಸಿದ ನಂತರ ಹಂತಕ ತಂಡದ ಮೇಲೆ ಒತ್ತಡ ಹೆಚ್ಚಿದ್ದು, ಇದೀಗ ಮೂವರು ಆರೋಪಿಗಳು ಪೊಲೀಸರ ವಶಕ್ಕೆ ಬಂದಿದ್ದಾರೆ.

ರಿಜ್ವಾನ್, ಇರ್ಫಾನ್ ಹಾಗೂ ಶಾಕೀರ್ ಎಂಬವರು ಪೊಲೀಸರ ಕೈಗೆ ಸಿಕ್ಕಿರುವ ಆರೋಪಿಗಳಾಗಿದ್ದು, ಈ ಮೂವರು ಆರಿಫ್ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರೆಂದು ತಿಳಿದುಬಂದಿದೆ.

ಮಾರ್ಚ್ 27ರಂದು ಮುಂಜಾನೆ ಸುಮಾರು 3.30ರ ವೇಳೆಗೆ ತೊಕ್ಕೊಟ್ಟು ಫ್ಲೈಓವರ್ ಮೇಲೆ ಈ ಭೀಕರ ಘಟನೆ ನಡೆದಿತ್ತು. ಹತ್ಯೆ ನಡೆಸಿದ ಬಳಿಕ ಆರೋಪಿಗಳು ತಾವು ಬಂದಿದ್ದ Innova ಕಾರಿನಲ್ಲಿ ಬೆಂಗಳೂರು ಕಡೆಗೆ ಪರಾರಿಯಾಗಿದ್ದರು. ಆದರೆ ಮಾಣಿ ಸಮೀಪದ ಬುಡೋಳಿ ಬಳಿ ಕಾರಿನ ಡೀಸೆಲ್ ಖಾಲಿಯಾಗಿದ್ದರಿಂದ ಅವರು ವಾಹನವನ್ನು ಅಲ್ಲಿ ತೊರೆದು, ಮಂಗಳೂರಿನಿಂದ ಹಾಸನ ಕಡೆಗೆ ತರಕಾರಿ ಸಾಗಿಸುತ್ತಿದ್ದ Tata Ace ವಾಹನದಲ್ಲಿ ಪ್ರಯಾಣಿಸಿ ನಂತರ ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ.

ಈ ಮಾಹಿತಿ ಆಧರಿಸಿ CCB ಪೊಲೀಸರು ಬೆಂಗಳೂರಿನಲ್ಲಿ ಬೀಡುಬಿಟ್ಟು ತನಿಖೆ ನಡೆಸುತ್ತಿದ್ದರು. ಆರೋಪಿಗಳು ತಮ್ಮ ಅಡಗುತಾಣಗಳನ್ನು ನಿರಂತರವಾಗಿ ಬದಲಾಯಿಸುತ್ತಿದ್ದರಿಂದ ಅವರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಈ ನಡುವೆ ಆರು ಮಂದಿ ಇದ್ದ ತಂಡ ಎರಡು ಭಾಗಗಳಾಗಿ ವಿಭಜನೆಗೊಂಡಿದ್ದು, ಒಂದು ತಂಡ ಮೈಸೂರಿನಲ್ಲಿ ಮತ್ತು ಮತ್ತೊಂದು ತಂಡ ಬೆಂಗಳೂರಿನಲ್ಲಿ ಅಡಗಿಕೊಂಡಿತ್ತು ಎನ್ನುವ ಮಾಹಿತಿ ಲಭ್ಯವಾಗಿತ್ತು.

ಪೊಲೀಸರು ವಿವಿಧ ರೀತಿಯಲ್ಲಿ ಒತ್ತಡ ಹೇರಿಕೊಂಡು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಕಡೆ ಅವರನ್ನು ಪೊಲೀಸರಿಗೆ ಶರಣಾಗುವಂತೆ ಮಾಡುವ ಪ್ರಯತ್ನಗಳೂ ನಡೆದಿದ್ದವು. ಆದರೆ ನಗರ ಪೊಲೀಸ್ ಆಯುಕ್ತರು “ಆರೋಪಿಗಳನ್ನು ಸರೆಂಡರ್ ಮಾಡಿಸುವ ಪ್ರಶ್ನೆಯೇ ಇಲ್ಲ, ಅವರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಖಂಡಿತ ಯಶಸ್ವಿಯಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದರು.

ಇದೀಗ ಪೊಲೀಸರ ಒತ್ತಡ ಮತ್ತು ಭಯದಿಂದ ಹಂತಕರ ಪೈಕಿ ಮೂವರು ಆರೋಪಿಗಳು CCB ಪೊಲೀಸರ ಮುಂದೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಮತ್ತೊಂದು ಮಾಹಿತಿಯ ಪ್ರಕಾರ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಈ ಮೂವರನ್ನು ಮಂಗಳೂರಿನ ದಕ್ಕೆಯಲ್ಲಿರುವ CCB ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಈ ಪ್ರಕರಣದಲ್ಲಿ ಕುತೂಹಲ ಮೂಡಿಸಿರುವ ಪ್ರಮುಖ ಅಂಶವೆಂದರೆ, ರೌಡಿಶೀಟರ್ ಆಗಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಯಾವುದೇ ಗಲಾಟೆಗಳಲ್ಲಿ ಭಾಗಿಯಾಗದ ಆರಿಫ್ ಅವರನ್ನು ಬರ್ಬರವಾಗಿ ಹತ್ಯೆಗೈಯಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ಪ್ರಕರಣಗಳ ಹಿನ್ನೆಲೆಯಲ್ಲಿ ಅವರ ಮೇಲೆ ರೌಡಿಶೀಟ್ ದಾಖಲಾಗಿದ್ದರೂ, ಬಹುತೇಕ ಪ್ರಕರಣಗಳು ನ್ಯಾಯಾಲಯದಲ್ಲಿ ಅಂತ್ಯಗೊಂಡಿದ್ದು, ಒಂದೆರಡು ಪ್ರಕರಣಗಳು ಮಾತ್ರ ವಿಚಾರಣೆಯ ಹಂತದಲ್ಲಿವೆ.

ಟೊಪ್ಪಿ ನೌಫಾಲ್ ಹತ್ಯೆಯ ಪ್ರತೀಕಾರವಾಗಿ ಈ ಹತ್ಯೆ ನಡೆದಿರಬಹುದು ಎನ್ನುವ ಅನುಮಾನಗಳು ವ್ಯಕ್ತವಾದರೂ, ನೌಫಾಲ್ ಹತ್ಯೆಗೆ ಆರಿಫ್‌ಗೆ ನೇರ ಸಂಬಂಧ ಇಲ್ಲ ಎಂಬ ಮಾಹಿತಿಗಳೂ ದೊರೆತಿವೆ. ಆದ್ದರಿಂದ ಈ ಆರೋಪಕ್ಕೆ ಸಂಬಂಧಿಸಿದ ಸ್ಪಷ್ಟ ಸಾಕ್ಷ್ಯಾಧಾರಗಳು ಇನ್ನೂ ಲಭ್ಯವಾಗಿಲ್ಲ.
ಇದೀಗ ಪೊಲೀಸರ ವಶದಲ್ಲಿರುವ ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಈ ಕೃತ್ಯಕ್ಕೆ ಯಾರು ಪ್ರೇರಣೆ ನೀಡಿದರು, ವಾಹನ ಒದಗಿಸಿದವರು ಯಾರು, ಪರಾರಿಯಾದ ನಂತರ ಆರೋಪಿಗಳಿಗೆ ಸಹಾಯ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.

ಪ್ರಕರಣದ ಆರಂಭದಲ್ಲಿ ಮಾರಿಪಳ್ಳ ಜಬ್ಬಾರ್ ಅವರ ಹೆಸರು ಕೂಡ ಕೇಳಿಬಂದಿತ್ತು. ಆರಿಫ್ ಸ್ನೇಹಿತರ ವಾಟ್ಸಾಪ್ ಚಾಟ್‌ಗಳಲ್ಲಿ ಅವರ ಹೆಸರು ಉಲ್ಲೇಖವಾಗಿದ್ದರೂ, ಜಬ್ಬಾರ್ ಅವರು “ನನಗೂ ಈ ಕೃತ್ಯಕ್ಕೂ ಯಾವುದೇ ಸಂಬಂಧ ಇಲ್ಲ, ಆರಿಫ್ ನನ್ನ ಸ್ನೇಹಿತ” ಎಂದು ಸ್ಪಷ್ಟನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಬೇರೆ ದಿಕ್ಕಿನಲ್ಲಿ ತನಿಖೆ ಮುಂದುವರಿಸಿದರು.

ಮಂಜೇಶ್ವರದಿಂದ ಕಾರನ್ನು ಬಾಡಿಗೆಗೆ ಪಡೆದು ಉಳ್ಳಾಲಕ್ಕೆ ತಂದಿದ್ದ ಇಮ್ರಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ತನಿಖೆಯಲ್ಲಿ ಹಂತಕ ತಂಡದ ಸದಸ್ಯನೇ ಆ ಕಾರನ್ನು ತರಿಸಿದ್ದ ಹಾಗೂ ಎರಡು ದಿನಗಳ ಕಾಲ ಅದೇ ಕಾರಿನಲ್ಲಿ ಸಂಚರಿಸಿದ್ದರೆಂಬ ಮಾಹಿತಿ ಹೊರಬಂದಿದೆ.

ಹತ್ಯೆ ನಡೆದ ನಂತರ ಆರೋಪಿಗಳನ್ನು ನೇಮಿಸಿದ್ದವರು ಕೈಕೊಟ್ಟ ಕಾರಣದಿಂದಲೇ ಅವರು ಸಂಕಷ್ಟಕ್ಕೆ ಸಿಲುಕಿದ್ದು, ಹಣದ ಕೊರತೆಯಿಂದ ಕಾರಿಗೆ ಇಂಧನ ತುಂಬಿಸಲು ಸಾಧ್ಯವಾಗಲಿಲ್ಲ ಎನ್ನುವ ಮಾಹಿತಿಯೂ ಹೊರಬಂದಿದೆ. ಇದರ ಪರಿಣಾಮವಾಗಿ ಕಾರು ಬುಡೋಳಿ ಬಳಿ ನಿಂತಿದ್ದು, ಅಲ್ಲಿಂದ Tata Ace ವಾಹನದಲ್ಲಿ ಅವರು ಪರಾರಿಯಾಗಿದ್ದರು.

ಪ್ರಸ್ತುತ ಮೂವರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ಉಳಿದ ಮೂವರು ಆರೋಪಿಗಳು ಬೆಂಗಳೂರಿನಲ್ಲಿ ಅಡಗಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೈಸೂರಿನಲ್ಲಿ ಸಹಾಯ ಸಿಗದೆ ಹಿಂತಿರುಗಿದ ಈ ಮೂವರು ಕೊನೆಗೆ ಮಂಗಳೂರಿಗೆ ಬಂದು CCB ಕಚೇರಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಒಟ್ಟಾರೆ, ಆರಿಫ್ ಹತ್ಯೆ ಪ್ರಕರಣದಲ್ಲಿ ಇದು ಮಹತ್ವದ ಮುನ್ನಡೆ ಎಂದು ಹೇಳಲಾಗುತ್ತಿದ್ದು, ಉಳಿದ ಆರೋಪಿಗಳ ಬಂಧನ ಹಾಗೂ ಹತ್ಯೆಯ ನೈಜ ಕಾರಣಗಳು ಶೀಘ್ರದಲ್ಲೇ ಬಹಿರಂಗವಾಗುವ ನಿರೀಕ್ಷೆಯಿದೆ.

😀
0
😍
0
😢
0
😡
0
👍
1
👎
0

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ
Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading