ಭಾರತದ ಸಮಾಜ ಸುಧಾರಣೆಯ ಇತಿಹಾಸದಲ್ಲಿ ಜ್ಯೋತಿಬಾ ಫುಲೆ ಅವರ ಹೆಸರು ಅಚ್ಚಳಿಯದ ಗುರುತು ಮೂಡಿಸಿದೆ. ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಚಿಂತನೆ, ಒಂದು ಚಳವಳಿ. ಅವರ ಜೀವನದಲ್ಲಿ ನಡೆದ ಒಂದು ಘಟನೆ, ಅವರ ಚಿಂತನೆಗೆ ಮಹತ್ತರ ತಿರುವು ನೀಡಿದ್ದು, ಭಾರತದ ಶಿಕ್ಷಣ ಮತ್ತು ಸಮಾನತೆಯ ಹೋರಾಟಕ್ಕೆ ಬುನಾದಿ ಹಾಕಿತು.
ಬಾಲ್ಯದ ಅನುಭವ – ಅವಮಾನವೇ ಪ್ರೇರಣೆ
ಜ್ಯೋತಿಬಾ ಫುಲೆ ಅವರು ಒಬಿಸಿ ವರ್ಗಕ್ಕೆ ಸೇರಿದ ಹೂವಿನ ವ್ಯಾಪಾರ ಮಾಡುವ ಕುಟುಂಬದಲ್ಲಿ ಜನಿಸಿದ್ದರು. ಬಾಲ್ಯದಲ್ಲಿಯೇ ಅವರು ಶಿಕ್ಷಣದ ಮಹತ್ವ ಅರಿತಿದ್ದರು. ಆದರೆ, ಸಮಾಜದಲ್ಲಿ ಜಾತಿ ಆಧಾರಿತ ಭೇದಭಾವ ಗಟ್ಟಿಯಾಗಿ ನೆಲೆಸಿತ್ತು.
ಒಂದು ದಿನ, ಅವರ ಬ್ರಾಹ್ಮಣ ಸ್ನೇಹಿತನು ತನ್ನ ಮನೆಯ ಕಾರ್ಯಕ್ರಮಕ್ಕೆ ಜ್ಯೋತಿಬಾ ಅವರನ್ನು ಆತ್ಮೀಯವಾಗಿ ಆಹ್ವಾನಿಸುತ್ತಾನೆ. ಸ್ನೇಹದ ನೆಲೆಯಲ್ಲಿ ಅವರು ಆ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಆದರೆ ಅಲ್ಲಿ ನಡೆದ ಘಟನೆ ಅವರ ಮನಸ್ಸಿಗೆ ಆಘಾತ ನೀಡಿತು. ಸ್ನೇಹಿತನ ಮನೆಯವರು “ನೀವು ಕೆಳಜಾತಿಯವರು, ಇಲ್ಲಿ ಬರಬಾರದು” ಎಂದು ಅವರನ್ನು ಅವಮಾನಿಸುತ್ತಾರೆ.
ಈ ಘಟನೆ ಜ್ಯೋತಿಬಾ ಅವರ ಮನಸ್ಸಿಗೆ ಭಾರೀ ನೋವನ್ನುಂಟುಮಾಡಿತು. ಅವಮಾನದಿಂದ ಬೇಸರಗೊಂಡ ಅವರು ಹೊರಗೆ ಬಂದು ಒಂದು ಮರದ ಕೆಳಗೆ ಕುಳಿತುಕೊಳ್ಳುತ್ತಾರೆ.
ಅಸ್ಪೃಶ್ಯರ ಪ್ರತಿಕ್ರಿಯೆ – ಹೊಸ ಪ್ರಶ್ನೆ
ಅದೇ ಸಮಯದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಅಸ್ಪೃಶ್ಯ ಸಮುದಾಯದವರು ಅವರನ್ನು ಗಮನಿಸುತ್ತಾರೆ. “ಏಕೆ ದುಃಖವಾಗಿದ್ದೀಯ?” ಎಂದು ಕೇಳುತ್ತಾರೆ. ಜ್ಯೋತಿಬಾ ಅವರು ತಮಗೆ ನಡೆದ ಅವಮಾನವನ್ನು ವಿವರಿಸುತ್ತಾರೆ.
ಅದಕ್ಕೆ ಅವರು ನಕ್ಕು “ಇದು ಯಾವ ಅವಮಾನ?” ಎಂದು ಪ್ರಶ್ನಿಸುತ್ತಾರೆ.
ಈ ಉತ್ತರ ಜ್ಯೋತಿಬಾ ಅವರಲ್ಲಿ ಹೊಸ ಚಿಂತನೆ ಹುಟ್ಟಿಸಿತು.
“ನನಗೆ ಅವಮಾನ ಅನ್ನಿಸುವುದು ಇವರಿಗೆ ಯಾಕೆ ಅನ್ನಿಸುವುದಿಲ್ಲ?” ಎಂಬ ಪ್ರಶ್ನೆ ಅವರಿಗೆ ಉದಯವಾಯಿತು.
ಅವರು ಅರಿತುಕೊಂಡ ಮಹತ್ವದ ಸತ್ಯ ಏನೆಂದರೆ:
ಅವಮಾನವನ್ನು ಅರಿಯುವ ಚಿಂತನೆ ಕೂಡ ಶಿಕ್ಷಣದಿಂದ ಬರುತ್ತದೆ.
ತಮಗೆ ಶಿಕ್ಷಣ ಇದ್ದುದರಿಂದ ಅವಮಾನ ಅರಿವಾಯಿತು. ಆದರೆ ಅಸ್ಪೃಶ್ಯ ಸಮುದಾಯದವರಿಗೆ ಶಿಕ್ಷಣದ ಕೊರತೆಯಿಂದ ಆ ಅರಿವು ಇಲ್ಲ. ಇದೇ ಅಸಮಾನತೆಯ ಮೂಲ ಎಂದು ಅವರು ತಿಳಿದುಕೊಂಡರು.
ಶಿಕ್ಷಣ ಚಳವಳಿ – ಸಮಾಜ ಪರಿವರ್ತನೆಗೆ ಹೆಜ್ಜೆ
ಈ ಅನುಭವವೇ ಜ್ಯೋತಿಬಾ ಫುಲೆ ಅವರನ್ನು ಸಮಾಜ ಸುಧಾರಣೆಯ ದಾರಿಯತ್ತ ಕರೆದೊಯ್ದಿತು. ಅವರು ಎಲ್ಲ ವರ್ಗದ ಜನರಿಗೆ, ವಿಶೇಷವಾಗಿ ಹಿಂದುಳಿದವರು ಮತ್ತು ಮಹಿಳೆಯರಿಗೆ ಶಿಕ್ಷಣ ನೀಡುವ ಸಂಕಲ್ಪ ಕೈಗೊಂಡರು.
ಈ ಮಹತ್ವದ ಕಾರ್ಯದಲ್ಲಿ ಅವರ ಪತ್ನಿ ಸಾವಿತ್ರಿಬಾಯಿ ಫುಲೆ ಅವರ ಪಾತ್ರ ಅತ್ಯಂತ ಪ್ರಮುಖ. ಅವರು ಭಾರತದಲ್ಲೇ ಮೊದಲ ಮಹಿಳಾ ಶಿಕ್ಷಕಿಯಾಗಿ ಹೆಣ್ಣಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಹೊಸ ಯುಗಕ್ಕೆ ನಾಂದಿ ಹಾಡಿದರು.
1848ರಲ್ಲಿ, ಪುಣೆ ನಗರದಲ್ಲಿ ಅವರು ಹೆಣ್ಣುಮಕ್ಕಳಿಗಾಗಿ ಮೊದಲ ಶಾಲೆಯನ್ನು ಪ್ರಾರಂಭಿಸಿದರು. ಇದು ಆ ಕಾಲದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿತ್ತು.
ಒಂದು ಅವಮಾನಕರ ಘಟನೆ, ಒಂದು ವ್ಯಕ್ತಿಯ ಜೀವನವನ್ನೇ ಅಲ್ಲ, ಒಂದು ಸಮಾಜದ ಭವಿಷ್ಯವನ್ನೂ ಬದಲಾಯಿಸಬಹುದು. ಜ್ಯೋತಿಬಾ ಫುಲೆ ಅವರು ಅನುಭವಿಸಿದ ನೋವು, ಇಂದು ಲಕ್ಷಾಂತರ ಜನರಿಗೆ ಬೆಳಕಾಗಿ ಪರಿಣಮಿಸಿದೆ.
ಅವರ ಜೀವನದ ಈ ಘಟನೆಯು ನಮಗೆ ಒಂದು ಪ್ರಶ್ನೆಯನ್ನು ಬಿಟ್ಟುಹೋಗುತ್ತದೆ.
“ನಾವು ಶಿಕ್ಷಣದ ಮೂಲಕ ಸಮಾಜವನ್ನು ಎಷ್ಟು ಬದಲಾಯಿಸಿದ್ದೇವೆ?”
ಜ್ಯೋತಿಬಾ ಫುಲೆ ಜನುಮದಿನದ ಶುಭಾಶಯಗಳು
