ಭಾರತದ ಸಂವಿಧಾನದ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಬಹುಜನ ಸಮಾಜಕ್ಕೆ ಸಂಸದ, ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ಮಹತ್ವದ ಮನವಿ ಮಾಡಿದ್ದಾರೆ
ಏಪ್ರಿಲ್ 14ರಂದು ಆಚರಿಸಲ್ಪಡುವ ಅಂಬೇಡ್ಕರ್ ಜಯಂತಿಯನ್ನು ತಮ್ಮದೇ ರೀತಿಯಲ್ಲಿ ಆಚರಿಸಲು ಅವಕಾಶ ನೀಡದಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರ ಹಕ್ಕುಗಳನ್ನು ನಿರಾಕರಿಸುವ ಯಾವುದೇ ನಡೆ ಅಸಹ್ಯಕರವಾಗಿದ್ದು, ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಇಂದಿನಿಂದ ಏಪ್ರಿಲ್ 14ರವರೆಗೆ ಮೂರು ದಿನಗಳ ಕಾಲ ಪ್ರತೀ ಸಂಜೆ ಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ಗೌರವ ಸಲ್ಲಿಸಲು ಜನರಿಗೆ ಮನವಿ ಮಾಡಲಾಗಿದೆ. ಈ ಕ್ರಮವು ಕೇವಲ ಆಚರಣೆಯಷ್ಟೇ ಅಲ್ಲ, ಆತ್ಮಗೌರವ ಮತ್ತು ಜಾಗೃತಿಯ ಸಂಕೇತವಾಗಲಿದೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಮಕ್ಕಳಿಗೆ ಅಂಬೇಡ್ಕರ್ ಅವರ ಜೀವನ ಹೋರಾಟ, ಆಲೋಚನೆಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ತಿಳಿಸಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ ಮಹಾತ್ಮ ಜ್ಯೋತಿರಾವ್ ಫುಲೆ ಮತ್ತು ಛತ್ರಪತಿ ಶಾಹು ಮಹಾರಾಜ್ ಅವರಂತಹ ಮಹನೀಯರ ವಿಚಾರಗಳನ್ನು ಪರಿಚಯಿಸುವುದು ನಮ್ಮ ನಿಜವಾದ ಶಕ್ತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
