ಬೆಂಗಳೂರು: ಪರಿಶಿಷ್ಟ ಜಾತಿ–ಪಂಗಡಗಳ ಭೂಹಕ್ಕುಗಳನ್ನು ರಕ್ಷಿಸಲು ಜಾರಿಯಲ್ಲಿರುವ PTCL (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಭೂಮಿ ವರ್ಗಾವಣೆ ನಿಷೇಧ) ಕಾಯ್ದೆಗೆ ವಿರುದ್ಧವಾಗಿ ಸಹಾಯಕ ಆಯುಕ್ತರು (AC), ಜಿಲ್ಲಾಧಿಕಾರಿಗಳು (DC) ಹಾಗೂ ಹೈಕೋರ್ಟ್ನಿಂದ ಬರುತ್ತಿರುವ ತೀರ್ಪುಗಳ ಹಿನ್ನೆಲೆಯಲ್ಲಿ, PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿಯ ವತಿಯಿಂದ ಇಂದು ನಗರದ ಗಾಂಧಿಭವನದಲ್ಲಿ ಮಹತ್ವದ ಸಭೆ ನಡೆಯಿತು.
‘ಬುಡ್ಡಿ ದೀಪ’ ಲಿವಿಂಗ್ ಟೈಮ್ಸ್ ಮಾಸಿಕ ಪತ್ರಿಕೆಯ ಮೊದಲ ಸಂಚಿಕೆ ಲೋಕಾರ್ಪಣೆ
ಸಭೆಯಲ್ಲಿ PTCL ಕಾಯ್ದೆಯ ಮೂಲ ಉದ್ದೇಶವನ್ನು ದುರ್ಬಲಗೊಳಿಸುವ ರೀತಿಯಲ್ಲಿ ಆಡಳಿತಾತ್ಮಕ ಹಾಗೂ ನ್ಯಾಯಾಂಗ ತೀರ್ಪುಗಳು ಬರುತ್ತಿರುವುದು ದಲಿತ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆತಂಕ ವ್ಯಕ್ತವಾಯಿತು. ಸರ್ಕಾರವೇ ಕಾಯ್ದೆಗೆ ತಿದ್ದುಪಡಿ ತಂದಿದ್ದರೂ, ಅದನ್ನು ಜಾರಿಗೆ ತರುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ಕಾಯ್ದೆಯ ಆತ್ಮವನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವಕ್ತಾರರು ಆಕ್ಷೇಪಿಸಿದರು.

ಸರ್ಕಾರದ ಒಳಮರ್ಮ, ಭೂಮಿ ಸಂಬಂಧಿತ ಪ್ರಕರಣಗಳಲ್ಲಿ ನಡೆಯುತ್ತಿರುವ ವಿಳಂಬ, ಮತ್ತು ನ್ಯಾಯಾಲಯಗಳಲ್ಲಿ ದಲಿತರ ಪ್ರಕರಣಗಳಿಗೆ ತಾರತಮ್ಯಪೂರ್ಣ ನಿಲುವು ತಾಳಲಾಗುತ್ತಿದೆ ಎಂಬ ವಿಷಯಗಳ ಮೇಲೆ ವಿಸ್ತೃತ ಚರ್ಚೆ ನಡೆಯಿತು. PTCL ಕಾಯ್ದೆಯನ್ನು ದುರ್ಬಲಗೊಳಿಸುವ ಯಾವುದೇ ಕ್ರಮಗಳ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ ಎಂದು ಸಭೆ ತೀರ್ಮಾನಿಸಿತು.
‘ಬಂಟ್ವಾಳ: ದ.ಕ ಭೀಮ್ ಆರ್ಮಿ ಉದ್ಘಾಟನೆ ಮತ್ತು ಪದಾಧಿಕಾರಿಗಳ ಆಯ್ಕೆ
ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ರೂಪಿಸುವುದು, ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸುವುದು ಮತ್ತು ಸರ್ಕಾರದ ಮೇಲೆ ಒತ್ತಡ ಹೇರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ಒಮ್ಮತ ಮೂಡಿತು. ದಲಿತರ ಭೂಹಕ್ಕುಗಳ ರಕ್ಷಣೆಗೆ PTCL ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಆಗ್ರಹಿಸುವ ನಿರ್ಣಯದೊಂದಿಗೆ ಸಭೆ ಮುಕ್ತಾಯವಾಯಿತು.